ಸುದ್ಧಿ ವಾಹಿನಿಗಳು ಅತ್ಯಂತ ಪ್ರಭಾವೀ ಮಾಧ್ಯಮಗಳು. ಆದ್ದರಿಂದ ಬಿತ್ತರಿಸಲಾಗುತ್ತಿರುವ ಸುದ್ಧಿಗಳ ಬಗ್ಗೆ ಹಾಗು ಸುದ್ದಿಯನ್ನು ಹೇಳುವಾಗ ಯಾವ ದೃಷ್ಟಿ ಕೋನದಲ್ಲಿ ಹೇಳುತ್ತಾರೆ ,ಅದನ್ನು ಪುಷ್ಟಿಕರಿಸಲು ಏನೇನು ಉಪಯೋಗಿಸುತ್ತಾರೆ ಎಂಬುದು ಮುಖ್ಯವಾಗುತ್ತದೆ .
ನಮ್ಮ ಕನ್ನಡ ನ್ಯೂಸ್ ಚಾನೆಲ್ಗಳು ಒಂದು ಸುದ್ದಿಯನ್ನು ಅಥವಾ ಘಟನೆಯನ್ನು ಹೇಗೆ ನಿಭಾಯಿಸುತ್ತಾರೆ ಅನ್ನುವುದಕ್ಕೆ ಸಣ್ಣ ಉದಾಹರಣೆ ಇಲ್ಲಿದೆ. ನಟಿಯೊಬ್ಬಳಿಗೆ ನಾಯಿ ಕಚ್ಚಿದೆ .ನಮ್ಮ ಚಾನೆಲ್ ನವರಿಗೆ ಇದೇ ದೊಡ್ದ ವಿಷಯ.
ಸುದ್ಧಿ ಓದುತ್ತಿರುವರು:
ಈದೀಗ ಬಂದ ಸುದ್ದಿ, ಹೆಸರಾಂತ ನಟಿಯೊಬ್ಬರಿಗೆ ಕಾಮಿನಿಯವರಿಗೆ ನಾಯಿ ಕಚ್ಚಿರುವ ವರದಿಯಾಗಿದೆ."ಓಡಿ ಹೋದ ತಂಗಿ" ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ನಟಿಗೆ ಬೀದಿ ನಾಯಿ ಕಚ್ಚಿದೆ.ನಮಗೆ ವರದಿ ಬಂದ ಪ್ರಕಾರ ಕಪ್ಪು ವರ್ಣದ ಬೀದಿ ನಾಯಿಯೊಂದು ಕಾಮಿನಿಯವರ ಮಂಡಿಯ ಮೇಲಿನ ಭಾಗಕ್ಕೆ ಕಚ್ಚಿದೆ . ಕಾಮಿನಿಯವರನ್ನು ಸ್ಥಳೀಯ ಆಸ್ಪತ್ರೆ ಗೆ ದಾಖಲಿಸಲಾಗಿದೆ.ಇನ್ನೂ ಹೆಚ್ಚಿನ ಮಾಹಿತಿಗೆ ನಮ್ಮ ಸ್ಥಳೀಯ ವರದಿಗಾರ ತಿಪೇಶ್ ರವರನ್ನು ಮಾತನಾಡಿಸೋಣ.ತಿಪ್ಪೇಶ್ ರವರೇ ಹೇಳಿ ಅಲ್ಲಿನ ಪರಿಸ್ಥಿತಿ ಹೇಗಿದೆ.
ತಿಪ್ಪೇಶ್:
ಓಡಿ ಹೋದ ತಂಗಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಕಾಮಿನಿಯವರಿಗೆ ಕಚ್ಚ್ಚಿದೆ. ಕೂಡಲೇ ಅವ್ರನ್ನು ಸ್ಥಳೀಯ ಆಸ್ಪತ್ರೆ ಗೆ ದಾಖಲಿಸಲಾಗಿದೆ.
ಸುದ್ಧಿ ಓದುತ್ತಿರುವರು:
ಆ ನಾಯಿ ಯಾವ ವರ್ಣದ್ದು ಮತ್ತು ಎಲ್ಲಿ ಕಚ್ಚಲಾಗಿದೆ ಅಂತ ಹೇಳಬಹುದಾ?
ತಿಪ್ಪೇಶ್: ಆ ನಾಯಿ ಕಪ್ಪು ಬಣ್ಣದ್ದೂ ಹಾಗು ಅದು ಅವರ ಮಂಡಿಯ ಮೇಲ್ಭಾಗಕ್ಕೆ ಕಚ್ಚಲಾಗಿದೆ .
ಸುದ್ಧಿ ಓದುತ್ತಿರುವರು: ಹಲೋ ಇದೀಗ ಆಸ್ಪತ್ರೆ ಯಲ್ಲಿ ಪರಿಸ್ಥಿತಿ ಹೇಗಿದೆ? ಹಲೋ ಹಲೋ .ಎಲ್ಲಿದೀರಾ . ಕಾರಣಾಂತರಗಳಿಂದ ತಿಪ್ಪೇಶ ರವರ್ ಜೊತೆ ಸಂಪರ್ಕ ಸಾಧ್ಯವಾಗುತ್ತಿಲ್ಲಾ....
ಇಲ್ಲಿ ಕೆಲವು ಗಮನಿಸಬೇಕಾದ ಅಂಶಗಳು ಇವೆ. ಮೊದಲನೆಯದಾಗಿ ಅವರು ಆರಿಸಿಕೊಂಡಿರುವ ವಿಷಯ.ಓಕೆ ನಾನಿಲ್ಲಿ ಕೊಟ್ಟಿರುವ ಉದಾಹರಣೆ ನಿಮಗೇ ಬಾಲಿಶ ಅನ್ನಿಸಬಹುದು. ಆದರೆ ಇಂತಹ ತೀರಾ ಬಾಲಿಶ ಅನ್ನುವಂತ ವಿಷಯಗಳು ನಮ್ಮಲ್ಲಿ ಪ್ರಸಾರವಾಗುತ್ತದೆ ಅನ್ನುವುದಂತೂ ನಿಜ . ಸಾಮನ್ಯವಾಗಿ ಸ್ಥಳೀಯ ವರದಿಗಾರರನ್ನು ಫೋನ್ ಅಲ್ಲಿ ಮಾತನಾಡಿಸಿ , ಅಲ್ಲಿ ನಡೆಯುತ್ತಿರುವುದು ಏನು ಎಂದು ಕೇಳುವುದು ಘಟನೆ ನಡೆಯುತ್ತಿರುವ ಜಾಗದ ಬಗ್ಗೆ ಪೂರ್ತಿ ಮಾಹಿತಿ ಸಿಗದಾಗ. ಆದರೆ ಮೇಲೆ ನಾವು ನೋಡಿದಂತೆ ಸ್ಥಳೀಯ ವರದಿಗಾರ ಹೊಸದನ್ನು ಏನು ಹೇಳುವುದಿಲ್ಲ. ಹಾಗೆಯೇ ನಮ್ಮ ಚಾನೆಲ್ ನಲ್ಲಿ ಕೂಡ ಸುಮ್ಮನೆ ಸ್ಥಳೀಯ ವರದಿಗಾರರನ್ನು ಮಾತು ಮಾತಿಗೂ ಫೋನ್ ನಲ್ಲಿ ಮಾತನಾಡಿಸಿ ಕೊನೆಗೆ ಹೇಳಿದನ್ನೆ ಹೇಳುವುದು ನಿಜವಾಗಲೂ ನಗು ತರಿಸುತ್ತದೆ. ಚಾನೆಲ್ ಗಳು ಈ ವಿಚಾರದಲ್ಲಿ ಸ್ವಲ್ಪ ಗಮನಿಸಬೇಕು.
ಇನ್ನೂ ನಮ್ಮ ಕನ್ನಡ ನ್ಯೂಸ್ ಚಾನೆಲ್ ಗಳು ಜ್ಯೋತಿಷ್ಯದ ಬ್ರಾಂಡ್ ಅಂಬಾಸಡರ್ ಗಳಾಗಿವಬಿಟ್ಟಿವೆ. ಜ್ಯೋತಿಷ್ಯ ನಮ್ಮ ಭಾರತ ಸಂಸ್ಕೃತಿಯ ಭಾಗ. ಅದನ್ನು ಪ್ರ್ರೋತ್ಸಾಹಿಸುವುದು ಒಳ್ಳೆಯದೇ. ಆದರೆ ಧೂದ್ ಪೇಡ ಸಿಹಿ ಅಂತ ಅದನ್ನೇ ಜಾಸ್ತಿ ತಿಂದರೆ ನಾಳೆ ಹೊಟ್ಟೆ ಕೆಡೋದು ಗ್ಯಾರಂಟಿ.ಬೆಳಗ್ಗೆ ಒಂದು ಸಲ ಜ್ಯೋತಿಷ್ಯ ಸರಿ ಆದರೆ ದಿನವಿಡೀ ಉಂಡಿದ್ದು ಉರಚಿದಕ್ಕೆ ಅದನ್ನೇ ಅವಲ್ಂಭಿಸಿದರೆ ಅದನ್ನು ನಂಬಿಕೆ ಅನ್ನುವುದಿಲ್ಲಾ ಅದನ್ನು ಮೂಢ ನಂಬಿಕೆ ಅನ್ನುತ್ತಾರೆ. ಒಮ್ಮೆ ಚಾನೆಲ್ನಲ್ಲಿ ನೋಡಿದ್ದು ನೆನೆಪು. ಯಾವ ರಾಜಕಾರಣಿಗಳು ಯಾವ ಕ್ಷೇತ್ರದಲ್ಲಿ ಗೆಲ್ಲುತ್ತಾರೆ ಅನ್ನುವುದಕ್ಕೆ ಸರ್ವೇ ಅನ್ನು ಅವಲಂಭಿಸುವುದು ಬಿಟ್ಟು ರಾಜಕಾರಣಿಗಳ ಕುಂಡಲಿಯನ್ನು ನೋಡಿ ವರದಿ ಕೊಡುತ್ತಿದ್ದರು.ಇನ್ನೂ ಈ ಚಾನೆಲ್ ಗಳಲ್ಲಿ ಬರುವ ಜ್ಯೋತಿಷಿಗಳಾದರು ಎಂಥವರು. ಜನರಲ್ಲಿ ಬರೀ ಭಯ ಹುಟ್ಟಿಸುವಂತರು. ಪ್ರಳಯ ಆಗುತ್ತದೆ....ಕಲ್ಲು ಕುದುರೆಗೆ ಜೀವ ಬರುತ್ತದೆ ಎಂದು ನಂಬಿಸುವವರು.
ಒಂದು ಚಾನೆಲ್ ನಲ್ಲಿ ,ಸ್ವಲ್ಪ ದಿನಗಳ ಹಿಂದೆ ಒಬ್ಬ ಸ್ವಾಮೀಜಿಯ ವಿರುದ್ಧ ಎತ್ತಿಕಟ್ಟಲು ಭಾರೀ ಮಾತನಾಡುವ ಇನ್ನೊಬ್ಬ ಸ್ವಾಮೀಜಿಯನ್ನು ಎತ್ತಿ ಹಿಡಿಯಲಾಯಿತು. ಎತ್ತಿ ಹಿಡಿದ ಸ್ವಾಮಿಜಿಯನ್ನಂತೂ ಹೀರೋ ಥರಹ ಸಣ್ಣ ಪುಟ್ಟ ವಿಚಾರಗಳಿಗೂ ತರಲಾಯಿತು.ಕೊನೆಗೆ ಆ ಸ್ವಾಮೀಜಿಯಾ ಕಳ್ಳನೆಂದು ಗೊತ್ತದಾಗ ಆ ಚಾನೆಲ್ ಮತ್ತದೇ ಸ್ವಾಮೀಜಿಯನ್ನು ಕರೆದು ಸಂದರ್ಶನ ಮಾಡಿ ಅವನ ಕಾವಿ ಬಿಚ್ಚಿಸಿ ತನ್ನ ಮರ್ಯಾದೆ ಉಳಿಸಿಕೊಂಡಿತು. ಒಬ್ಬರನ್ನು ಎತ್ತಿ ಹಿಡಿಯುವ ಮುಂಚೆ ಅವರ ಬಗ್ಗೆ ಸರಿಯಾಗಿ ತಿಳಿದು ಕೊಳ್ಳದ ಚಾನೆಲ್ ಏಷ್ಟರ ಮಟ್ಟಿಗೆ ನಮಗೆ ನ್ಯಾಯ ಒದಗಿಸಬಹುದು.
ಇನ್ನೂ ಕ್ರೈಂ ತೋರಿಸುವ ಚಾನೆಲ್ ಪ್ರೋಗ್ರಾಮಗಳಂತೂ ನಿಜವಾಗಿಯೂ ಭಯ ಹುಟ್ಟಿಸುವಂತದ್ದು. ಯಾರದ್ದಾದರೂ ಕೊಲೆಯಾದರೆ ಅಥವಾ ಅತ್ಯಾಚಾರ ಆದರೆ ನಮ್ಮ ಚಾನೆಲ್ ಗಳಿಗೆ ಅದು ರೋಚಕ ಕಥೆ. ಅವರು ಆ ಆ ಹೀನಾಯ ಕೃತ್ಯ ಗಳನ್ನು ನಿರೂಪಿಸುವ ಶೈಲಿಯಂತೂ ವಿಚಿತ್ರ. ಕೊಲೆಯ ಹಿಂದಿನ ಸಂಚನ್ನು ರೋಚಕ ಎಂದು, ಅತ್ಯಾಚಾರ ನಡೆದ ಕುತೂಹಲ ಕಥೆಯಂದು ಬಿಂಬಿಸುತ್ತವೆ. ಆ ಕಾರ್ಯಕ್ರಮ ನೋಡಿದವನು ಒಂದು ಹೆದರಿ ಮುದುರಿ ಕೊಳ್ಳಬೇಕು, ಇಲ್ಲದಿದ್ದಲ್ಲಿ ವಾಂತಿ ಮಾಡ್ಬೇಕು . ತಲೆ ಕೆಟ್ಟ ಕೆಲವರು ತಪ್ಪು ಎಲ್ಲೆಲ್ಲಿ ಮಾಡ್ಬಾರದು ಏಂದು ಈ ಕಾರ್ಯಕ್ರಮಗಳ ಮೂಲಕ ತಿಳಿದುಕೊಂಡೂ ಇನ್ನೊಂದು ಕ್ರೈಂ ಮಾಡಿರುವ ಇತಿಹಾಸವೂ ಇದೆ.
ಕೊನೆಯದಾಗಿ ಹೇಳುವುದೇನೆಂದರೆ ಬರೀ ಟಿ.ಆರ್. ಪಿ ಹಿಂದೆ ನ್ಯೂಸ್ ಚಾನೆಲ್ಗಳು ಬೀಳಬಾರದು .ಜ಼ನರಿಗೆ ಭಯ ಹುಟ್ಟಿಸುವಂತ,ಕ್ರೈಂ ಗಳನ್ನು ವೈಭೀಕರಿಸುವಂತ, ತಲೆ ಬುಡ ಇಲ್ಲದ ಮೂಢ ನಂಬಿಕೆಯನ್ನು ಪ್ರೋತ್ಸಾಹಿಸುವಂತಹ ,ಸಾಕ್ಷ್ಯ ಇಲ್ಲದ ಸುದ್ದಿಗಳನ್ನು ತೋರಿಸದೆ ಒಳ್ಳೆಯ ಸಕರಾತ್ಮಕ ನೆಲಗಟ್ಟಿನಲ್ಲಿ ಸುದ್ದಿಯನ್ನು ಜನರಿಗೆ ಮುಟ್ಟಿಸಬೇಕು.