ಶುಕ್ರವಾರ, ಆಗಸ್ಟ್ 24, 2018

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ ಹಲಸಿ ಹೋಗಿರುವ ೧೦ ವರ್ಷದ ಹಿಂದಿನ ಬೇರೆ ಭಾಷೆಯ ರಿಮೇಕ್ ಚಿತ್ರಗಳ ಮಧ್ಯ ಒಂದಲ್ಲ ಎರಡಲ್ಲ ಚಿತ್ರ ವಿಭಿನ್ನವಾಗಿ ನಿಲ್ಲುತ್ತದೆ . ರಾಮ ರಾಮ ರೇ ಅಂತಹ ಒಂದು ಮನಮುಟ್ಟುವ ಚಿತ್ರ ಕೊಟ್ಟ ಸತ್ಯಪ್ರಕಾಶ್ ತಂಡದ ಮೇಲೆ ಭಾರೀ ನಿರೀಕ್ಷೆ ಇತ್ತು . ಈ ಚಿತ್ರ ನೋಡಿದ ಮೇಲೆ ಅದು ಹುಸಿಯಾಗಿಲ್ಲ . 
ಬಾನು ಹುಡುಕುವ ಸಮೀರ ,ಸಮೀರ ಹಾಗು ಬಾನು ಹುಡುಕುತ್ತಿರುವವರ ಸುತ್ತ ನಡೆಯುವ ಕಥೆ ಇದು. ಚಿತ್ರದ್ದಲ್ಲಿ ಯಾವುದೇ ಸನ್ನಿವೇಶ ಆಗಲಿ , ಪಾತ್ರವನ್ನಾಗಲಿ ತುರುಕಿಲ್ಲ . ಪಾತ್ರಗಳು , ಸನ್ನಿವೇಶಗಳು ಕಥೆಗೆ ಪೂರಕವಾಗಿ ಇದ್ದು ,ಕಥೆಯನ್ನು ಮುಂದೆ ತಳ್ಳಿಕೊಂಡು ಹೋಗುತ್ತದೆ . ಚಿತ್ರದ ಹೈಲೈಟ್ ಸಮೀರ ಪಾತ್ರ ಮಾಡಿರುವ ಬಾಲಕ . ಮಾಸ್ಟರ್ ಮಂಜುನಾಥ್ ಹಾಗು ಮಾಸ್ಟರ್ ಆನಂದ್ ನೋಡಿದ ಹಾಗೆ ಆಗುತ್ತದೆ . ಚಿತ್ರದುದ್ದಕ್ಕೂ ತಿಳಿಹಾಸ್ಯವಿದ್ದು, ನಿರ್ದೇಶಕರು ಎಲ್ಲಿಯೂ ಪ್ರೇಕ್ಷಕನಿಗೆ ಮೆಸೇಜ್ ಅನ್ನು ನಮ್ಮ ಮಾಸ ಸಿನೆಮಾಗಳಂತೆ ಸಂಭಾಷಣೆ ಮೂಲಕ ಹೇಳದೇ ಸನ್ನಿವೇಶಗಳ ಮೂಲಕ ಕಟ್ಟಿಕೊಟ್ಟಿದ್ದಾರೆ . ಕಾಲ ಕೂಡಿಬಂದರೆ ಹಸುವು ಹುಲಿಯೂ ಒಟ್ಟಿಗೆ ಇರಬಹುದು ಅನ್ನುವ ದೃಶ್ಯ ಇದಕ್ಕೆ ಒಂದು ಉದಾಹರಣೆ . 
ಚಿಕ್ಕ ವಯಸ್ಸಿನ ಮಗ ಕಳೆದುಕೊಂಡ ಅಪ್ಪ ,ಮಕ್ಕಳ್ಳಿಲ್ಲದ ದಂಪತಿಯ ತೊಳಲಾಟ , ತಂದೆ ಹಾಗು ಮಗಳ ಆಸೆ ತೀರಿಸಲಾಗದೆ ನೋವುನ್ನುವ ತಂದೆ , ಪಕ್ಕದ ಮುಸ್ಲಿಮ್ ಮನೆಯ ಸಂಸಾರದ ಕಷ್ಟವನ್ನು ತಮ್ಮ ಮನೆಯ ಕಷ್ಟದಂತೆ ಕಾಣುವ ನೆರೆಯ ಹಿಂದೂ ದಂಪತಿ , ತನ್ನ ಬೇಳೆ ಬೇಯಿಸಿಕೊಳ್ಳಲು ಯಾವ ಮಟ್ಟಕ್ಕೆ ಬೇಕಾದ್ರೂ ಹೋಗುವ ಆಟೋ ಚಾಲಕ , ಹೊರಗೆ ಕಲ್ಲಿನಂತೆ ಕಂಡರೂ ಹೂವಿನಂತ ಮನಸ್ಸು ಇರುವ ಸಾಲ ಕೊಡುವವನು , ಮೆಕ್ಕಾಕ್ಕೆ ಹೋಗಬೇಕು ಎಂದಿರುವ ಅಜ್ಜ , ತಮ್ಮನನು ಕಳೆದುಕೊಂಡು ಕಣ್ಣೀರಿಡುವ ಅಕ್ಕ ಹೀಗೆ ಒಂದಕ್ಕಿಂತ ಒಂದು ಚೆಂದದ ಪಾತ್ರಗಳು ಚಿತ್ರದಲ್ಲಿ ಇವೆ . 
ನೊಬಿನ್ ಪಾಲ್ , ವಾಸುಕಿ ವೈಭವ್ ಸಂಗೀತ ಹಾಗು ಕ್ಯಾಮೆರಾ ವರ್ಕ್ ಕೂಡ ಸೊಗಸಾಗಿದೆ . ಸತ್ಯ ಪ್ರಕಾಶ್ ಸರ್ ಬರೆದಿರುವ ಸಾಹಿತ್ಯ ಅದ್ರಲ್ಲೂ ಕಾಡು ನುಂಗಿದ ಕಳ್ಳ ಊರಿದು , ಹುಡುಕಿದ್ರೆ ದೇವರೇ ಸಿಕ್ತಾನಂತೆ ಸಾಲುಗಳು ಸಿನಿಮಾ ಮುಗಿದ ಮೇಲೆಯೂ ಕಾಡುತ್ತದೆ . ೬ ಅಡಿ ಹೀರೋ ಗಳು ಇಲ್ಲದ ಈ ಚಿತ್ರದಲ್ಲಿ ಕಥೆಯೇ ಹೀರೋ . ಈ ವರ್ಷದಲ್ಲಿ ಬಂದ ಒಂದೊಳ್ಳೆಯ ಕನ್ನಡ ಚಲನಚಿತ್ರ . ಸಂಸಾರ ಸಮೇತ ಹೋಗಿ ನೋಡಿ . ಈ ಚಿತ್ರ ಗೆದ್ದರೆ ಇಂತಹ ಇನ್ನಷ್ಟು ಒಳ್ಳೆಯ ಚಿತ್ರಗಳು ಬರಲು ಸಾಧ್ಯ . ಕೊನೆಯದಾಗಿ ಹೆಬ್ಬುಲಿಯಂತ ಮಾಸ್ ಸಿನಿಮಾ ನಿರ್ಮಿಸದ ಸಂಸ್ಥೆ ಇಂತಹ ಒಂದು ಅರ್ಥಪೂರ್ಣ ಚಿತ್ರ ಮಾಡಲು ಮುಂದೆ ಬಂದಿದ್ದು ನಿಜವಾಗಲೂ ಪ್ರಶಂಸನೀಯ .

ಬುಧವಾರ, ಮೇ 9, 2018

ಹುಟ್ಟು ಹಬ್ಬ



ಇದೀಗ ನಾ ಊದಿ ಆರಿಸಬೇಕಾದ
ನನ್ನ ವಯಸ್ಸಿನಷ್ಟು ಇರುವ
candleಗಳ ಸಂಖ್ಯೆ
ನಾ ಇಷ್ಟು ವರ್ಷ
ಏನನ್ನೂ  ಕಿತ್ತು ಹಾಕದ್ದನ್ನು
ನೋಡಿ ನಕ್ಕಂತಿದೆ .

ನನ್ನ ಸುತ್ತ ಒಂದಿಷ್ಟು ಜನ
ನನ್ನ ಹುಟ್ಟು ಹಬ್ಬ ಆಚರಿಸಲು ಬಂದಿದ್ದಾರೆ .
ಅದರಲ್ಲಿ ಕೆಲವರು ನನಗೆ ಗೊತ್ತು ,
ಹಲವರು ಗೊತ್ತೆಂದು ತಿಳಿದಿದ್ದೇನೆ.
ಇನ್ನು ಸ್ವಲ್ಪ ಜನ ನನಗೆ
ಯಾರಂದೇ ತಿಳಿದಿಲ್ಲ .
ಬಹುಶಃ ಕೊನೆಯಲ್ಲಿ cake ಸಿಗುತ್ತದೆ
ಎಂದು ಬಂದಿರಬೇಕು .
ಇನ್ನೂ ಬಂದ ಹಲವರಿಗೆ
ಇದು ಕೆಲಸದ ಮಧ್ಯೆ ಬ್ರೇಕ್ ಅಷ್ಟೇ.

ಅದೋ ಒಂದು ಮೂಲೆಯಲ್ಲಿ
ನನ್ನ ಆಫೀಸ್ H.R
ನನ್ನ ಹುಟ್ಟುಹಬ್ಬದ
ಆಚರಣೆಯ ಹೊರೆ ಹೊತ್ತಿದ್ದಾಳೆ.
ನನ್ನ ಮನೆಯವಳಂತೆ ಸಂಭ್ರಮಿಸುತ್ತಿದ್ದಾಳೆ.
ಮೊನ್ನೆ ನನ್ನ ಸಹೋದ್ಯೋಗಿ
ಹುಟ್ಟು ಹಬ್ಬಕ್ಕೂ ಇಷ್ಟೇ ಖುಷಿಯಾಗಿದ್ದಳು .
ಅವಳ ಸೌಂದರ್ಯಕ್ಕೆ ಕಾರಣವಾದ
ಮೇಕ್ ಅಪ್ ನ ಹಿಂದೆ ಯಾರಿಗೂ
ಕಾಣದ ನೋವೊಂದು ಅಡಗಿದೆ .
ಆಫೀಸ್ ನಲ್ಲಿರುವ ಎಲ್ಲರ
ಹುಟ್ಟು ಹಬ್ಬದ ದಿನ
ಸಂಭ್ರಮದಿಂದ ಆಚರಿಸಲೇಬೇಕು
ಅದೇ ಅವಳ ಕೆಲಸ ,
ಸ್ಮಶಾನದಲ್ಲಿ ಹೆಣ ಸುಡುವವನ ಹಾಗೆ .

ಎಲ್ಲರೂ ಹಾಡು ಹಾಡಿದರು
ಅದೇ ರಾಗ, ಅದೇ ತಾಳ
ಅಷ್ಟೇ ಕರ್ಕಶ , ಅಷ್ಟೇ ಕೃತಕ .
ಮೊನ್ನೆಯೂ ಇನ್ನೊಬ್ಬನಿಗೆ
ಇದನ್ನೇ ಹಾಡಿದ್ದರು ,
ನಾಳೆಯೂ ಇನ್ನೊಬ್ಬನಿಗೆ
ಇದನ್ನೇ ಹಾಡುತ್ತಾರೆ
ಒಳ್ಳೆಯ ಟೇಪ್ ರೆಕಾರ್ಡರ್ ತರ .
ಕೊಟ್ಟಿದ್ದ ಪ್ಲಾಸ್ಟಿಕ್ ಚಾಕುವಿನಲ್ಲಿ
cake ಕತ್ತರಿಸುವ ಶಾಸ್ತ್ರ ಮಾಡಬೇಕು ಅಷ್ಟೇ,
ಉಳಿದದ್ದನ್ನು ಅವರೇ ಕಟ್
ಮಾಡಿಕೊಳ್ಳುತ್ತಾರೆ ಬೇಕಾದ ಹಾಗೆ .

ಬಂದವರಲ್ಲಿ ಅನೇಕರು 
Cake ತಿನ್ನುವುದಕ್ಕಿಂತ
ನನ್ನ ಮುಖಕ್ಕೆ ಹಚ್ಚಿ ಖುಷಿ ಪಡುತ್ತಾ ,
Cake ತಿನ್ನುವವರು , ಹಚ್ಚುತ್ತಿರುವವರಿಗೆ ಬಯ್ಯುತ್ತಾ
ಡಯಟ್ ಅಂದು cake ತಿನ್ನದೇ ಹೋದರೂ ,
ಬಾಯಲ್ಲಿ ಇಟ್ಟುಕೊಂಡು ತಿನ್ನುವ
ಹಾಗೆ photo ತೆಗದುಕೊಳುತ್ತಾ ,
ನೆನ್ನೆ ಪರಿಚಯ ಆದ ಕೆಲವರು,
ಸೋಶಿಯಲ್ ಮೀಡಿಯಾ ದಲ್ಲಿ
ನನ್ನ ಗೆಳಯನ bday ಎಂದು post ಹಾಕುತ್ತಾ
ಇದ್ದ ಇಂತಹ ಜನಗಳ ನಡುವೆ
ನನ್ನ ನೋಟ ಮಾತ್ರ ಮೂಲೆಯಲ್ಲಿ
ಆಗಿಂದ mobile ನೊಳಗೆ ಮುಳುಗಿರುವ ,
ಯಾರದೋ ಒತ್ತಾಯಕ್ಕೆ ಬಂದಂತೆ
ಇರುವ ನನಗಿಷ್ಟದ ಹುಡುಗಿಯ ಮೇಲೆ .

ಸ್ವಲ್ಪ ಹೊತ್ತಿಗೆ Cake ಖಾಲಿ,
ಎಲ್ಲರೂ ಜಾಗ ಖಾಲಿ .
ಎಲ್ಲರೂ ನಗುವದನ್ನು ಮರೆತು
ಮತ್ತೆ ಜಟಕಾ ಬಂಡಿ ತಳ್ಳುವದರಲ್ಲಿ ಮಗ್ನ.
ನಾನು ಹೋಗಬೇಕಿದೆ ಅದಕ್ಕೆ ,
ಅದಕ್ಕೂ ಮುಂಚೆ ಬಾತ್ರೂಮ್ ನಲ್ಲಿ
ಒಬ್ಬನೇ ಮುಖಕ್ಕೆ ಹತ್ತಿದ
cake ನ ಜಿಡ್ಡು ತಿಕ್ಕಿ ತಿಕ್ಕಿ ತೊಳೆಯಬೇಕಿದೆ .

Note :It's a poem about birthday celebration at office. The author finds the
whole celebration is full of fake smiles and mechanic.
Please forgive if any mistakes.You can ping me and let me know my mistakes.

ಭಾನುವಾರ, ಏಪ್ರಿಲ್ 29, 2018

ಅವಳು ದೂರವಾದಾಗ


ಹುಚ್ಚು ಮನಸು

ಹುಚ್ಚು ಮನಸು
ನನಗೇ ಅರಿವಿಲ್ಲದೇ
ನಿನ್ನ ತುಸು ಜಾಸ್ತಿಯೇ
ಹಚ್ಚಿಕೊಂಡಿದೆ .
ನೀ ಸ್ವಲ್ಪ ದೂರ ಸರಿದರೂ
ಹುಚ್ಚು ಹೆಚ್ಚಾಗಿ
ನೆಮ್ಮದಿ ನೆಲ ಕಚ್ಚುತಿದೆ .


ಸುಡುವುದು
ನಿನ್ನ ನೆನಪು ಸುಡಲಾಗದೇ
ಹೋದ ಸಿಟ್ಟಿಗೆ
ನಾ ಸುಟ್ಟಿದ್ದು ಹಲವಾರು
ಸಿಗರೇಟು


ನೆನಪು

ನೀ ಅಂದು ಮುತ್ತಿಕ್ಕಿದ್ದ
ತುಟಿಗಳಿಗೆ ,
ಈಗ ಬರಿ ನೆನಪುಗಳು
ಮುತ್ತಿಕ್ಕುತ್ತಿವೆ

ಸಮ್ಮೇಳನ

ಹಿತವೆನಿಸಿದ
ಅಂದು ನನ್ನೆದೆಯ ಮೇಲೆ
ನಿನ್ನ ತಲೆಯ ಭಾರದ
ಜಾಗದಲ್ಲಿ ,
ಇಂದು ಸತ್ತ ಸುಮಧುರ
ನೆನಪುಗಳ
ಸಮ್ಮೇಳನ.




ಶುಕ್ರವಾರ, ಮಾರ್ಚ್ 9, 2018

ಅವಳು ಪಾಠವಾದಾಗ

ಸೂಚನೆ :ಇಲ್ಲಿ ಬರುವ ಸನ್ನಿವೇಶಗಳಲ್ಲಿ ಕೆಲವೊಂದು  ಕಾಲ್ಪನಿಕ , ಕೆಲವೊಂದು ನಿಜ . ಅದನ್ನು  ತಿಳಿಯುವ  ಗೋಜಿಗೆ ಹೋಗದೇ ಇದ್ದವರು ಮಾತ್ರ ಓದಿ

ಸಣ್ಣವನಿದ್ದಾಗ ನನಗೆ  ಳ , ಲ ,ಸ ,ಷ ,ಶ , ರ ಕಾರ ಉಚ್ಚರಿಸಲು ಬರುತ್ತಾ ಇರಲಿಲ್ಲ . ಎಲ್ಲರೂ ನನ್ನ ಕರೆದು ,ಮಾತಾಡಲು ಹೇಳಿ ಮಜಾ ತೆಗೆದುಕೊಳ್ಳುವುದೇ ಜಾಸ್ತಿ . ಅಮ್ಮ ತಿದ್ದಲು ಪ್ರಯತ್ನ ಪಟ್ಟಿದ್ದರೂ , ನಾನು ಕಲಿಯದೇ ಇದ್ದಾಗ  ಇನ್ನು ಚಿಕ್ಕವನು ಎಂದು ಸುಮ್ಮನ್ನಿದ್ದಳು .ನನಗಿನ್ನು ನೆನಪಿದೆ, ಒಮ್ಮೆ ಬೆಂಗಳೂರಿನಲ್ಲಿ ಯಾವುದೋ ಕೆಲಸದ ಮೇಲೆ  ಹೋದಾಗ , ನೆಂಟರೊಬ್ಬರ ಕಾರ್ ಹತ್ತಿದ್ದೆವು . ಕಾರ್ ಉದ್ದಕ್ಕೂ ನನ್ನ ಮಾವಂದಿರು ನನ್ನ ಮಾತಾಡಿಸಿ , ನಾನು ತಪ್ಪು ಉಚ್ಛರಿಸಿದಾಗ ನಕ್ಕು ನಕ್ಕು ಇಟ್ಟಿದ್ದರು  . ಅಮ್ಮನಿಗೆ ಇದನ್ನು  ಸಹಿಸಲು ಆಗಲಿಲ್ಲ .
           ಊರಿಗೆ ಹಿಂದುರಿಗಿದ ನಂತರ  ಅಮ್ಮ  , ಛಲ ಹಿಡಿದ ಕಾಳಿಯಂತೆ  ನನ್ನ ಬಾಯಲ್ಲಿ ಸರಿಯಾದ  ಉಚ್ಚಾರಣೆ  ತರಿಸುವ ಪಣ ತೊಟ್ಟಳು . ಅದೆಷ್ಟು ಕೋಲು , ಸ್ಕೇಲ್ ಮುರಿದಿದೆಯೋ ನಾ ಕಾಣೆ .ಅವಳೇ  ದಿನಾ ರಾತ್ರಿ ಕಣ್ಣೀರಿಡುತ್ತಾ ಮದ್ದು ಹಚ್ಚುತ್ತಾ  ಇದ್ದಳು . ಅವಳ ಈ ಸ್ವಭಾವ ಕಂಡು ನನಗೆ  ಸಿಟ್ಟು ಬರುತ್ತಾ ಇತ್ತು ..
                                          ಕಾಲೇಜ್ನಲ್ಲಿ ಯಾವುದೋ ಸಮಾರಂಭ .  "ಶ್ರವಣ್ ಮತ್ತು ತಂಡದವರಿಂದ ಇದೀಗ ನಾಟಕ " ಎಂದು ಕೂಗಿದರು . ನಾನು ವೇದಿಕೆ ಏರಿದೆ . ಹುಡುಗರು ಜೋರಾಗಿ ಕಿರುಚಿದರು . ನನ್ನ ಜಂಘಾಬಲವೇ ಕುಸಿದಂತಾಗಿ , ಒಮ್ಮಲೇ ಉಸಿರು ತೆಗದು ಕೊಂಡು ಜೋರಾಗಿ ಒಂದು ಪ್ಯಾರಾಗ್ರಾಫ್ ಅಷ್ಟು  dialog ಹೊಡೆದೆ . ರ ,ಳ , ಲ ,ಷ ,ಸ ,ಶ ಎಲ್ಲವು ಪರ್ಫೆಕ್ಟ್ . ಮುಂದೆ ೧೫ ನಿಮಿಷ  ಹುಡುಗರು ನಮ್ಮ ಕಿರುನಾಟಕವನ್ನು ಸಕತ್ enjoy ಮಾಡಿದರು . ನಾ ಆವತ್ತು ನಿರರ್ಗಳವಾಗಿ dialog ಹೊಡೆದು , ಹುಡುಗರನ್ನು ಮೆಚ್ಚಿಸದೇ ಇದ್ದರೆ, ಕಥೆಯೇ ಬೇರೆಯದಾಗಿ ಇರುತ್ತಿತ್ತು .  ನಾಟಕ ಮುಗಿಸಿ ಬಂದವನಿಗೆ ನಾಲ್ಕೈದು ಜನ ಬಂದು "ಏನ್ ಡೈಲಾಗ್ ಹೊಡಿತ್ಯಾ ಗುರು " ಎಂದು ಹೇಳಿದಾಗ ಅಮ್ಮ ನೆನಪಾದಳು ...
---------------------------------------------------------------------------------------------------------------------------------

Second Puc  ಓದುತ್ತಾ  ಇದ್ದ ಸಮಯ . ಇಂಗ್ಲಿಷ್ ಪಿರಿಯಡ್ .ಅದೇನೋ ಮಾತಿನ ಮಧ್ಯೆ ಮೇಡಂ "ನೆನ್ನೆ ೧೮ ಜನ ಮುಂಬೈ ಅಲ್ಲಿ ಸತ್ತ ವಿಷಯ ಯಾರಾದರು ಓದಿದ್ರಾ ?"  ಅಂತ ಕೇಳಿದರು . ನಾನು ತಕ್ಷಣ ಜಾಗೃತನಾಗಿ "ಹೌದು mam , ಅದ್ರಲ್ಲಿ  8 ಜನ ಕನ್ನಡಿಗರು ಪಾಪ " ಎಂದೆ . ಮೇಡಂ "ಸ್ಟುಪಿಡ್ ,ಆ ೧೮ ಜನ ಮನುಷ್ಯರು ".  ಹುಟ್ಟುವ ಮೊದಲು ಇರುವ , ಸತ್ತ ಮೇಲೆ ಹೋಗುವ ಲೋಕದಲ್ಲಿ ನಾವೆಲ್ಲಾ ಒಂದೇ ಅನ್ನುವ ಪಾಠ ಕಲಿತೆ , ಆ ಒಂದು ಸಾಲಿನಿಂದ .
---------------------------------------------------------------------------------------------------------------------------
ಅವಳ ಮದುವೆಯಾದ ಮೇಲೆ , ಇದೇ ಮೊದಲ ಬಾರಿ ಸಿಕ್ಕಿದ್ದಳು. ಯಾಕೋ ನಗು ಇರಲಿಲ್ಲ  ,ಅವಳ ಮುಖದಲ್ಲಿ . ಏನಾಯಿತು ಅಂತ ವಿಚಾರಿಸಿದಾಗ , ತನ್ನ ಕಥೆ ಹೇಳಲು ಶುರು ಮಾಡಿದಳು .ಅವಳ  ಮಾವನ ಮನೆಯಲ್ಲಿ , ಈಕೆ  ಗಂಡನಿಗೆ ಹೆಸರಿಟ್ಟು ,ಏಕವಚನದಿಂದ ಕರೆಯುವುದು ದೊಡ್ಡ ಸಮಸ್ಯೆ ಆಗಿತ್ತು . ಅದಕ್ಕೆ ಈಕೆಯ ಅಮ್ಮ , ಅಪ್ಪ ಕೊನೆಗೆ ಮಾವನ ಮನೆಯವರ ಮುಂದೆ ಆದರೂ ರೀ ಅಂತ ಗಂಡನಿಗೆ  ಕರಿ, ಒಬ್ಬರೇ ಇದ್ದಾಗ ಏನು ಬೇಕಾದರೂ  ಹೇಳ್ಕೋ ಅಂತ ಸಲಹೆ ಕೊಟ್ಟಿದ್ದರು . ಇವಳದು ಒಂದೇ ಹಠ ,ಹಿಂದೊಂದು ಮುಂದೊಂದು ಮಾಡೋಕೆ ನನಗೆ ಇಷ್ಟ ಇಲ್ಲ . ನಾನು ಹೀಗೆ ಇರುತ್ತೇನೆ ಅಂತ . ಒಬ್ಬರನ್ನು ಮೆಚ್ಚಿಸಲು ಕೆಲವೊಮ್ಮೆ ನಾವು ಏನೆಲ್ಲಾ ನಾಟಕ ಮಾಡುತ್ತೇವೆ . ಅವಳು ಹಾಗಿರಲಿಲ್ಲ . ಹಾಗಾಗಲೂ ಒಪ್ಪಲಿಲ್ಲ ..
----------------------------------------------------------------------------------------------------------------------------
ಅವಳು ನಮ್ಮ ಕಾಲೇಜ್ ನ ಸುಂದರಿ . ಸ್ವಲ್ಪ ಜಂಭ ಇತ್ತು ಅನ್ನಿ . ನಾವು ಏನು ಕಮ್ಮಿ ಇರ್ಲಿಲ್ಲ .  ನಮ್ಮಿಬ್ಬರ ಸಂಬಂಧ ಎಣ್ಣೆ ಸೀಗೆಕಾಯಿ . ಒಂದು ದಿನ ಹೀಗೆ ಕೋಪ ನೆತ್ತಿಗೇರಿ ಕ್ಲಾಸ್ ನಲ್ಲಿ ಎಲ್ಲರ ಮುಂದೆ  ಅವಳನ್ನು ಹಿಗ್ಗಾ ಮುಗ್ಗಾ ಬಯ್ದಿದ್ದೆ . ಅಂತಹ ಬಾಯಿ ಬಡಕಿಯನ್ನು ಸುಮ್ಮನಾಗಿಸಿದೆ ಅಂತ ಬೇರೆಯವರ ಮುಂದೆ ಹೇಳಿ ಕೊಚ್ಚಿ ಕೊಂಡಿದ್ದು ಇದೆ . ಅದಾದ ಮೇಲೆ ನಾವು ಕಾಲೇಜ್ ಮುಗಿಯುವ ತನಕ ಮಾತಾಡಲೇ ಇಲ್ಲ . ಕಾಲೇಜ್ ಮುಗಿದ ಮೇಲೂ ನಾವು ಸಿಗಲಿಲ್ಲ , ಅದರ  ಗೋಜಿಗೂ ಹೋಗಲಿಲ್ಲ .
                 ಇದಾಗಿ ಹಲವು ವರ್ಷ ಕಳೆದಿರಬೇಕು . ನನಗೆ ಅಂದು ಆ  ಸನ್ನಿವೇಶದಲ್ಲಿ ನಾನು ನಡೆದುಕೊಂದದ್ದು ತಪ್ಪು ಅನ್ನುವಷ್ಟು mature ಆಗಿದ್ದೆ .  ಅವಳೇನಾದ್ರೂ ಮುಂದೆ ಬಂದರೆ ತಲೆ ತಗ್ಗುವಷ್ಟು ಪಶ್ಚಾತಾಪ ಇತ್ತು . ಒಂದು ದಿನ ಹೀಗೆ ಅಚಾನಕ್ಕಾಗಿ ನಾನು ಅಂಡಮಾನ್ ಟೂರ್ ಗೆ ಹೋದಾಗ ಸಿಕ್ಕಿ ಬಿಟ್ಟಳು . ನನ್ನ ನೋಡಿ ಹಿಗ್ಗಿದಂತಾಗಿ   , ತನ್ನ ಮನೆಯವರಿಗೆಲ್ಲಾ  ಪರಿಚಯ ಮಾಡಿಸಿದಳು . ತನ್ನ ಮನೆಗೂ ಬರಲೇಬೇಕು ಅಂತ ಒತ್ತಾಯ ಬೇರೆ . ಅವಳಿಂದ ಇಂತಹ ಪ್ರತಿಕ್ರಿಯೆ ನಾನು ನಿರೀಕ್ಷಿಸಿಯೇ ಇರಲಿಲ್ಲ . ನನ್ನ ಪ್ರಕಾರ ಮುಂದೊಂದು ದಿನ ನಾವೇನಾದ್ರೂ ಭೇಟಿಯಾದರೆ ಮನಸಿನಲ್ಲಿ ಅಸಡ್ಡೆ ,ಹಳೆಯ ಕಹಿ ನೆನಪುಗಳನ್ನು ತುಂಬಿಕೊಂಡು ಒಂದು ಹುಸಿ ಮಂದಹಾಸ ಬೀರಿ  ಮುಂದೆ ಹೋಗುತ್ತೇವೆ ಅಂದುಕೊಂಡಿದ್ದೆ . ಅವಳು ಹಾಗೆ ಮಾಡಲಿಲ್ಲ .ಅದನ್ನು  ಮರೆತಿದ್ದಳು ಅನ್ನಿಸುತ್ತದೆ  ಅಥವಾ ಕ್ಷಮಿಸಿರಬೇಕು .
---------------------------------------------------------------------------------------------------------------------------
ಇಂಜಿನಿಯರಿಂಗ್ ಓದುತ್ತಿರುವಾಗ ನಾವಿಬ್ಬರು ಸಿಕ್ಕಾಪಟ್ಟೆ ಕ್ಲೋಸ್ .  ಆದರು ಒಮ್ಮೆ ಯಾವುದೋ ವಿಷಯದಲ್ಲಿ ನನಗೆ ಅವಳು support ಮಾಡಲಿಲ್ಲ . ಒಳ್ಳೆ ನಾಗರಹಾವು ಸೇಡು ತೀರಿಸಿಕೊಳ್ಳುವಂತೆ ಅವಳನ್ನು ಕಾಡಿ , ಅವಳಿಗೆ ಬೇಸರ ತರಿಸಿದ್ದೆ . ನಾವಿಬ್ಬರು ಒಂದೇ ಪ್ರಾಜೆಕ್ಟ್ team ಅಲ್ಲಿ ಇದ್ದ ಕಾರಣ ,ಒಟ್ಟಿಗೆ ಕೆಲಸ ಮಾಡಲೇಬೇಕಿತ್ತು . ನನಗಿನ್ನು ಅವಳ ಮೇಲಿನ ಕೋಪ ಕಡಿಮೆ ಆಗಿರಲಿಲ್ಲ . ಅದೊಂದು ಪ್ರಾಜೆಕ್ಟ್ ಕೆಲಸ ಮಾಡುತ್ತಾ ಮಾಡುತ್ತಾ ನಾನು ಹಾಸ್ಟೆಲ್ ಗೆ ,ಊಟಕ್ಕೆ ಹೋಗಲಾಗಲಿಲ್ಲ .
ಹೊರಗಡೆ ತಿನ್ನಲು ದುಡ್ಡು ಇರಲಿಲ್ಲ . ನನಗೆ ಹಸಿವು ಜಾಸ್ತಿ ಅಂತ ಅವಳಿಗೆ  ಗೊತ್ತು . ತನ್ನ ಹಾಸ್ಟೆಲ್ ಇಂದ ನನಗೂ ಒಂದು ಬಾಕ್ಸ್ ಊಟ ತಂದಿದ್ದಳು . ನನ್ನ ಮುಂದೆ ಇಟ್ಟು ತಿನ್ನು ಅಂದಳು . ನಾನು ಕೋಪದಿಂದ ಬೇಡ ಅಂದೆ. ಆಕೆ "ನಿನ್ನ ಕೋಪ ಎಲ್ಲ ಊಟದ್ದ ಮೇಲೆ ಹಾಕಬೇಡ , ಜಾಡ್ಸಿ ಓದಿತೀನಿ ,ಮುಚ್ಕೊಂಡು ತಿನ್ನು ".  ಆ ದಿನ ಊಟ ಗಬಗಬನೆ  ತಿನ್ನುವಾಗ, ನನ್ನ ಕಣ್ಣಂಚಲ್ಲಿ ನೀರು .
---------------------------------------------------------------------------------------------------------------------------
ಅಮ್ಮನ ಹೆರಿಗೆ ಸಮಯ.ಆಕೆ ತವರಿಗೆ ಹೋಗಿದ್ದಳು  . ಅಜ್ಜಿ ನನ್ನ ನೋಡಿಕೊಳ್ಳಲು  ಬಂದಿದ್ದಳು . ಒಂದು ದಿನ ಬುತ್ತಿ ಮರೆತು ಶಾಲೆಗೆ  ಹೋಗಿದ್ದೆ . ಯಾವುದೋ ಪಿರಿಯಡ್ ಮಧ್ಯೆ  ನನ್ನಜ್ಜಿಯ ಸದ್ದು ಕೇಳಿತು .   ಬಾಗಿಲ ಹತ್ತಿರ ತಿರುಗಿ ನೋಡಿದರೆ ,ನನ್ನಜ್ಜಿ ಬುತ್ತಿ ಹಿಡಿದು ನಿಂತಿದ್ದಾಳೆ . "ಶ್ರವಣ್ ಬೇಕಿತ್ತು " ಅಂದಳು . ಮಿಸ್ ಗೆ ಪರಿಸ್ಥಿತಿ ಅರಿವಾಗಿ   ನನಗೆ  ಎದ್ದು ಹೋಗಿ ಬುತ್ತಿ ತೆಗದು ಕೊಂಡು ಬರಲು ಹೇಳಿದರು .  ಸಕ್ಕರೆ ಕಾಯಿಲೆ ಬಂದು ಸರಿಯಾಗಿ ಕಣ್ಣು ಕಾಣದ ಅಜ್ಜಿ , ಅದೂ  ಸ್ಟೇಟ್ ಹೈವೇ ಪಕ್ಕದಲ್ಲಿರುವ ನನ್ನ ಶಾಲೆಗೆ ಹೇಗೆ ಬಂದಳು ಅಂತ ಆಶ್ಚರ್ಯ ಪಡುತ್ತಲೇ ನಾನು ಅಜ್ಜಿ ಹತ್ತಿರ ಹೋದೆ . ಅಜ್ಜಿ ನನಗೆ ಬುತ್ತಿ ಕೊಟ್ಟು , ನನ್ನ ಗಟ್ಟಿ ತಬ್ಬಿ ಹಿಡಿದು ಹಣೆಗೆ ಮುತ್ತು  ಕೊಟ್ಟಳು . ಕ್ಲಾಸ್ನಲ್ಲಿ ಎಲ್ಲರೂ ನನ್ನನ್ನೇ  ನೋಡುತ್ತಾ ಇದ್ದರು ,ನನಗೆ ನಾಚಿಕೆ ಆಗಲಿಲ್ಲ . ಅಂದು ನನ್ನಜ್ಜಿಯ ಬೆಚ್ಚನೆಯ ಅಪ್ಪುಗೆ, ಪ್ರೀತಿಯ ಪಾಠ ಹೇಳಿಕೊಟ್ಟಿತ್ತು .

                                                                                                         --ಶ್ರವಣ್


Above author writes incidents where he has learnt lessons from women.The incident revolves around his mother, granny and some of his college friends.Happy international women's day .






Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...