ಗುರುವಾರ, ಏಪ್ರಿಲ್ 25, 2013

ಇನ್ನೂ ಸಿಗದ ಕನಸಿನ ರಾಣಿಗೊಂದು ಪ್ರೇಮಪತ್ರ



"ಶ್ರವಣ್ ನೋಡ್ತಾ ಇರು,ತಡವಾಗಿ ಸಿಕಿದ್ರು ಥೇಟ್ ನಿನ್ನ ರಾಜಕುಮಾರಿ ಇದ್ದ ಹಾಗೆ ಇರ್ತಾಳೆ " ಅಂತ ಅದೆಷ್ಟು ಗೆಳತಿಯರು ಸಮಾಧಾನ ಮಾಡಿಲ್ಲಾ ?. "ಬಂಗಾರದಂತ ಹೆಣ್ಣ ಮಗುನಾ ಮದುವೆ ಯಾಗಿ ,ಮನೆ ತುಂಬಾ ಮೊಮ್ಮಕ್ಳು ,ಅಪ್ಪ ಅಪ್ಪ ಅಮ್ಮನಿಗೆ ಕೊಡಪ್ಪಾ "ಅಂತ ಅದೆಷ್ಟು ನೆಂಟರು , ಅಜ್ಜ ಅಜ್ಜಿ ತಲೆ ಸವರಿ ಸವರಿ ಆಶೀರ್ವಾದ ಮಾಡಿಲ್ಲಾ?.
          ಆದರೆ ಇಷ್ಟೆಲ್ಲಾ ಹಾರೈಕೆ ,ಆಶೀರ್ವಾದಗಳ ನಡುವೆಯೂ ನನಗೆ ಅವರು ಹೇಳುವ ಆ ಹುಡುಗಿ ,ಅದೇ ನನ್ನ ಕನಸಿನ ರಾಣಿ ಅರ್ಥಾತ್ ನೀನೆ ನನ್ನ ಮನದರಸಿ ಇನ್ನು ನನಗೆ ಸಿಕ್ಕಿಯೇ ಇಲ್ಲ . ಅದಕ್ಕೆ ಏನೋ ಈ ಹುಡುಗಿ ನನ್ನ ಕನಸಿನ ಹುಡುಗಿ ಇರಬಹುದಾ ಅಥವಾ ಆ ಹುಡುಗಿ ನನ್ನ ಮನದರಾಣಿ ಇರಬಹುದಾ ಅಂತ ಸದಾ ನನ್ನ ಪ್ರೀತಿಯ ಹುಡುಕಾಟದಲ್ಲಿ ಇರುತ್ತೇನೆ .
        ನೀ ಅದೆಲ್ಲಿದಿಯೋ ?ನನಗೆ ಯಾವಾಗ ಸಿಗುತ್ತಿಯೋ ? ನನ್ನ ಮನದ ಸಿಂಹಾಸನವನ್ನು ಯಾವಾಗ ಅಲಂಕರಿಸುತ್ತೀಯೋ?ಗೊತ್ತಿಲ್ಲ . ಅದರೆ ಒಂದಲ್ಲಾ ಒಂದು ದಿನ ನನ್ನ ಜೀವನದಲ್ಲಿ ಪ್ರೀತಿ ಸಿಗುತ್ತೆ ಅಂದುಕೊಂಡಿರುವ ಆಶಾವಾದಿ ನಾನು .ಆ ಪ್ರೀತಿ ನನ್ನ ಪರಿಕಲ್ಪನೆಯ  ಮೂರ್ತರೂಪವೇ ಆಗಿರುತ್ತೆ ಅಂದರೆ ನೀನೇ ಆಗಿರುತ್ತೀಯಾ ಎಂಬುದು ನನ್ನ ನಂಬಿಕೆ.ಬೇರೆಯವರು ಇದನ್ನು ನಂಬಿಕೆ ಅಲ್ಲಾ ,ಇದನ್ನು ಅತಿ ಆಸೆ ಅನ್ನಬಹುದು, ಇಲ್ಲವೇ ಹುಚ್ಚು ಅಂತ ಕರೆಯಲೂಬಹುದು .ಪರವಾಗಿಲ್ಲ ಈ ಲೋಕದ ಜನರೇ ಹಾಗೆ ಕೆಲವೊಮ್ಮೆ ನಾವು ಆರು ಅಂದರೆ ಅದನ್ನು ಅವರು ಒಂಭತ್ತು ಅಂತಾರೆ .ಒಂಭತ್ತು ಅಂದಿದನ್ನು ಆರು ಅಂತಾರೆ .ಅವರ ಬಗ್ಗೆ ತಲೆ ಕೆಡಸಿ ಕೊಳ್ಳುವವನಲ್ಲ ನಾನು .ನನಗೆ ನನ್ನ ಪ್ರೀತಿ ಮೇಲೆ ಅಚಲ ವಿಶ್ವಾಸವಿದೆ .ಅದೆಕ್ಕೆ ಈ ಪೇಮ ಪತ್ರ .
       ಏನಿದು ಎಲ್ಲರೂ ಹುಡುಗಿ ಸಿಕ್ಕ ಮೇಲೆ ಪ್ರೇಮ ಪತ್ರ ಬರೆದರೆ ,ಇವನು ನನ್ನನ್ನು ಮಾತನಾಡಿಸಿಲ್ಲ ,ಭೇಟಿಯಾಗಿಲ್ಲ ನೋಡಿಲ್ಲ ಆಗಲೇ ಬರೆಯುತ್ತಿದಾನೆ ,ಇವನಿಗೇನಾದರೂ ಎರಡು ಸುತ್ತು ಕಮ್ಮಿನಾ ಅಂತ  ನೀ ಯೋಚಿಸುತ್ತಾ ಇರಬಹುದು ? .ಯಾರು ಹೇಳಿದ್ದು ನಾನು ನಿನ್ನ ನೋಡಿಲ್ಲ,ನಿನ್ನ ಮಾತನಾಡಿಸಿಲ್ಲಾ ಎಂದು ?ನಾನು ನಿನ್ನ ನೋಡಿದ್ದೇನೆ, ಮಾತನಾಡಿಸಿದ್ದೇನೆ,ಕೈ ಕೈ ಹಿಡಿದು ನಿನ್ನ ಜೊತೆ ಓಡಾಡಿದ್ದೇನೆ .ಎಲ್ಲಿ ಅಂತ ಗೊತ್ತಾಗುತ್ತಾ ಇಲ್ಲವಾ?ನಿನಗೆ ಹೇಗೆ ಗೊತ್ತಾಗುತ್ತೆ ?ನೀನೇ ನನ್ನ ಕನಸು ತುಂಬಾ ತುಂಬಿಕೊಂಡಿದ್ದರೂ ,ನನ್ನ ಕನಸಿನಲ್ಲಿ ಏನು ಆಗುತ್ತದೆ ಎನ್ನುವುದು ನನಗೆ ಮಾತ್ರ ಗೊತ್ತಾಗುತ್ತದೆ ತಾನೇ ?ಹೌದು ಹುಡುಗಿ, ನೀ ನನ್ನ ಕನಸು ಅಷ್ಟೇ ಅಲ್ಲಾ ನನ್ನ ಪ್ರತಿಯೊಂದು ಕನಸು ಕೂಡ ನೀನೆ. ನೀನು ನನ್ನ ಪ್ರತಿ ಕನಿಸಿನಲ್ಲೂ .ನೀನೇ ತುಂಬಿರುವೆ .

            ಆ ಕನಸುಗಳು ಹೇಗಿರುತ್ತೆ ಗೊತ್ತಾ ?ಅದೇ ಹಳೇ ಸಿನೆಮಾಗಳ ಹಾಡು ಥರಹ ,ಹಳೇ ಕಥೆಗಳ ಹಾಗೆ .ಅದ್ಯಾಕೋಗೊತ್ತಿಲ್ಲಾ ಅದೆಲ್ಲಾ ಕನಸುಗಳು ಶುರುವಾಗೋದು ಬರಡು ಭೂಮಿಯಲ್ಲಿ . ಆ ಬರಡು ಭೂಮಿಯಲ್ಲಿ ನಾನೊಬ್ಬ ಅಲೆಮಾರಿ . ಒಂಟಿತನ ಎಂಬ ಸೂರ್ಯನ ಬಿಸಿಲು ನನ್ನನ್ನು ಕಿತ್ತು ಕಿತ್ತು ತಿನ್ನುತ್ತಿರುತ್ತದೆ .ನನಗೆ ಕೇಳತೀರದ ದಾಹ . ಆ ದಾಹ ತೀರಲು ನನಗೆ ಪ್ರೀತಿಯೆಂಬ ನೀರು ಬೇಕು . ಆದರೆ ಅದು ಸಿಗದೇ ,ಹುಡುಕಿ ಹುಡುಕಿ ನಾನು ಅಲ್ಲೇ ತಲೆ ತಿರುಗಿ ಬೀಳುತ್ತೇನೆ .ಅಗ ಅಲ್ಲಿಗೆ ಒಂದು ಅಂದದ ಚೆಂದದ ಪಲ್ಲಕ್ಕಿ ಹೊತ್ತು ನಾಲ್ಕು ಜನ ಬರುತ್ತಾರೆ .ಆ ಪಲ್ಲಕ್ಕಿಯಲ್ಲಿ ಒಬ್ಬ ರಾಜಕುಮಾರಿ ಇರುತ್ತಾಳೆ . ನಾನು ತಲೆ ತಿರುಗಿ ಬಿದ್ದಿರುವುದನ್ನು ಅದು ಹೇಗೋ ನೋಡಿದ ಆ ರಾಜ ಕುಮಾರಿ ಸೇವಕರಿಗೆ ಹೇಳಿ ಪಲ್ಲಕ್ಕಿ ನಿಲ್ಲಿಸುತ್ತಾಳೆ .ಆಗ ಸೇವಕರು ನನ್ನ ಪರಸ್ಥಿತಿಯನ್ನು ನಿನಗೆ ವಿವರಿಸಿ ಹೇಳುತ್ತಾರೆ . ಆಗ ಆ ಪಲ್ಲಕ್ಕಿಯಿಂದ ರಾಜಕುಮಾರಿ ಕೆಳಗಿಳಿದು ಬರುತ್ತಾಳೆ . ಆ ರಾಜಕುಮಾರಿ ನೀನೆ . ಅಹ್ಹಾ ಅದೆಂಥಾ ಮಾಯೆ . ನೀನು ಕಾಲಿಟ್ಟ ಕೂಡಲೇ ಆ ಬರಡು ಭೂಮಿಯಲ್ಲಿ ಹಸಿರು ಹುಟ್ಟುತ್ತುದೆ . ಅಲ್ಲಿ ಬೀಜಗಳು ಮೊಳಕೆ ಒಡೆದು ,ಅದು ಗಿಡವಾಗಿ ಬೆಳದು ,ಹೂಗಳು ಹಣ್ಣುಗಳಿಂದ ಗಿಡಗಳ ರಂಭೆ,ಕೊಂಬೆಗಳು ಬಾಗಿ ನಿಲ್ಲುತ್ತವೆ .ನೀನು ಬಂದವಳೇ ನನ್ನ ತಲೆಯನ್ನು ನಿನ್ನ ತೊಡೆ ಮೇಲೆ ಇಟ್ಟುಕೊಂಡು ,ನಿನ್ನ ಕೈಯಾರೆ ನನಗೆ ನೀರು ಕುಡಿಸುವೆ . ಅದು ಬರಿಯ ನೀರಲ್ಲ, ಪ್ರೀತಿಯೆಂಬ ನೀರು .ನಾನು ಹಗಲಿರುಳು ಆ ಬರಡು ಭೂಮಿಯಲ್ಲಿ ಹುಡುಕುತ್ತಿದ್ದ ನೀರು . ಎರಡು ಹನಿ ನೀರು ನನ್ನೊಳಗೆ ಹೋಗುತ್ತಿದ್ದ ಹಾಗೆ ,ನನ್ನ ಆಯಾಸ ಎಲ್ಲಾ ತೀರಿ ಹೊಸ ಚೈತನ್ಯ ಮೂಡುತ್ತದೆ . ಆ ಚೈತನ್ಯದ ಮೂಲವೇ ನೀನು ಹುಡುಗಿ .
           ನಂತರ ನಾನು ನೀನು, ಕೈ ಕೈ ಹಿಡಿದು ಸುತ್ತ ಮುತ್ತಲೆಲ್ಲಾ ಓಡಾಡುತ್ತೇವೆ,ಆಟ ಆಡುತ್ತೇವೆ ,ಪ್ರೇಮ ಪಕ್ಷಿಗಳ ಹಾಗೆ . ಆ ಪ್ರೇಮಲೋಕಕ್ಕೆ ನಾನೇ ರಾಜ ನೀನೆ ರಾಣಿ .ನಮ್ಮದೇ ಅಲ್ಲಿ ಕಾರುಬಾರು .ಆದರೆ ಇಲ್ಲೊಂದು ಸಮಸ್ಯೆ ಇದೆ . ನಿನಗೆ ಅದು ಸಮಸ್ಯೆ ಥರಹ ಕಾಣದಿರಬಹುದು ಆದರೆ ನನಗೆ ಅದು ಸಮಸ್ಯೆ. ಅದೇನು ಅನದರೆ ಇಷ್ಟೆಲ್ಲಾ ಆದರೂ ಒಮ್ಮೆಯೂ ನಾನು ನಿನ್ನ ಮುಖವನ್ನು ಎಂದು ನೋಡಿಯೇ ಇಲ್ಲ .ನೀನು ನಿನ್ನ ಮುಖವನ್ನು ಸದಾ ಒಂದು ಪರದೆಯಂತಹ ಬಟ್ಟೆಯಿಂದ ಬರೀ ನಿನ್ನ ಸುಂದರ ಕಣ್ಣುಗಳು ಕಾಣುವ ಹಾಗೆ ಮುಚ್ಚಿಕೊಂಡಿರುತ್ತೀಯಾ . ಅದೇನೋ ನಾನು ಪ್ರತಿ ಸಲವೂ ಅದನ್ನು ತೆಗಯಲು ಹೋದಾಗ ಅಥವಾ ತೆಗೆಯಲು ಹೇಳಿದಾಗ ನೀನು ನಿರಾಕರಿಸುವೆ . "ಸಮಯ ಬರಲಿ" ಎಂದು ಹೇಳಿದವಳೇ ಮರುಕ್ಷಣವೇ ಪಲ್ಲಕ್ಕಿ ಏರಿ ಹೊರಟು ಬಿಡುತ್ತೀಯಾ . ನೀ ಹೋದ ಮರುಕ್ಷಣವೇ ಮತ್ತದೇ ಮರುಭೂಮಿ ,ಮತ್ತದೇ ದಾಹ , ಮತ್ತದೇ ನೀರಿಗಾಗಿ ಹುಡುಕಾಟ .
                ಅದೇನು ನಾನು ಕೇಳಬಾರದ್ದು ಕೇಳಿದೆ ,ಅಥವಾ ಅದೇನು ನಾನು ಮಾಡಬಾರದ್ದು ಮಾಡಿದೆ ?ಇಂದಿಗೂ ನನಗೆ ತಿಳುಯುತ್ತಿಲ್ಲ . ನಿನ್ನ ಮುಖ ನೋಡದೇ ಇರುವುದಕ್ಕೇನೋ ನಾನು ನಿನ್ನನ್ನು ಪ್ರತಿಕ್ಷಣ ,ಪ್ರತಿಯೊಬ್ಬ ಹುಡುಗಿಯಲ್ಲೂ ಹುಡುಕುತ್ತಿರುವುದು .ಕೆಲವೊಮ್ಮೆ ನಾನು ಯಾಕೆ ನಿನ್ನನ್ನು ಹುಡುಕುತ್ತಿರುವೆ ಎಂಬುದೇ ನಂಗೆ ಅರ್ಥ ಆಗುವುದಿಲ್ಲಾ .ಎಲ್ಲಾ ಹುಚ್ಚಾಟ ಅನ್ನಿಸುವುದು ಇದೆ .ಆದರೂ ಈ ಹುಚ್ಚಾಟದಲ್ಲೂ ಏನೋ ಸುಖವಿದೆ .
ಬಸ್ನಲ್ಲಿ ಹೋಗುವಾಗ ಪಕ್ಕದಲ್ಲೇ ನೀ ಬಂದು ಕೂರಬಹುದೇನೋ ?ಅಥವಾ ಯಾವುದೋ ರೋಡಿನಲ್ಲಿ ನೀನು ನನಗೆ ನನ್ನ ಗಾಡಿಯಲ್ಲಿ ಡ್ರಾಪ್ ಕೇಳಬಹುದೇನೋ ? ಅಥವಾ ಅಚಾನಕ್ಕಾಗಿ ನನ್ನ ಮೊಬೈಲ್ಗೆ ಕಾಲ್ ಮಾಡಿ ಹಾಗೆ ಪರಿಚಯ ಆಗಬಹುದೇನೋ,ಇಲ್ಲ ಅಂದರೆ ದಾರಿಯಲ್ಲಿ ಹೋಗುತ್ತಾ ಇರುವ ನನಗೆ ಬಂದು ಡಿಕ್ಕಿ ಹೊಡೆಯಬಹುದೇನೋ ? ಅಥವಾ ನಾನು ನೀನು ಲೈಬ್ರರಿಯಲ್ಲಿ ಇರುವ ಒಂದೇ ಪುಸ್ತಕ ಹುಡುಕುತ್ತಾ ,ಕೊನೆಗೆ ಆ ಪುಸ್ತಕ ಇಟ್ಟ ಜಾಗದಲ್ಲಿ ಸಿಗಬಹುದೇನೋ ?ಹೀಗೆ ಮನಸು, ಸದಾ ನೀನು ಆಗ ಸಿಗಬಹುದೇನೋ ,ಈಗ ಸಿಗಬಹುದೇನೋ ಎಂದು ಹಪಿಹಪಿಸುತ್ತಿರುತ್ತದೆ . ನಿನ್ನ ಹುಡುಕದ ಜಾಗ ಇಲ್ಲ,ದಿನ ಇಲ್ಲ ,ಕ್ಷಣ ಇಲ್ಲ . ಕೆಲವೊಮ್ಮೆ "ಶ್ರವಣ್ ನಿನಗೆ ನನಗಿಂತಲೂ ಒಳ್ಳೆ ಹುಡುಗಿ ಸಿಕ್ತಾಳೆ ಕಣೋ .ಡೋಂಟ್ ವರಿ " ಅಂತ ನಾನು ಇಷ್ಟ ಪಟ್ಟ ಹುಡುಗಿಯರು ಗಾಯದ ಮೇಲೆ ಉಪ್ಪು ಸವರುವಂತೆ ಹೇಳಿದ ಮೇಲೇನೆ ಗೊತ್ತಾಗುವುದು ಅದು ನೀನು ಅಲ್ಲ ಎಂದು .
              ಇಷ್ಟು ದಿನದಿಂದ ಪ್ರೀತಿಯನ್ನು ಅದುಮಿಟ್ಟುಕೊಂಡು , ಅದು ಈಗ ಮನದಾಳದಲ್ಲಿ ,ನೀನು ಸಿಗದೇ ,ಅದೂ ಹೊರಬರದೆ ಲಾವ ರಸದಂತೆ ನನ್ನಲ್ಲೇ ಕುದಿಯುತ್ತಾ ಇದೆ.ಏನು ಮಾಡೋದು ನಿಗಿ ನಿಗಿ ಯೌವ್ವನ ,ಹಾಳಾದ ರವಿಚಂದ್ರನ್ ಫಿಲ್ಮ್ ಗಳು ಹೋಮಕ್ಕೆ ತುಪ್ಪ ಹಾಕಿದ ಹಾಗೆ ಇನ್ನಷ್ಟು ಪುಷ್ಟಿ ಕೊಡುತ್ತಾ ಇವೆ .ಹೆದರಬೇಡ ,ನೀ ಎದುರು ಬಂದಾಗ ನಾನು ಇಷ್ಟ ದಿನ ಕೂಡಿಟ್ಟ ಈ ಪ್ರೀತಿಯನ್ನು ಲಾವ ರಸದಂತೆ ನಿನ್ನ ಮೇಲೆ ಚೆಲ್ಲುವುದಿಲ್ಲ . ಅದನ್ನು ನನ್ನ ಪ್ರೀತಿಯೆಂಬ ಮಾಯೆ ಉಪಯೋಗಿಸಿ ಮುತ್ತುಗಳನ್ನಾಗಿ ಅಂದರೆ ಈ ಪ್ರೇಮ ಪತ್ರಗಳಾಗಿ ಮಾಡಿಟ್ಟಿರುತ್ತೇನೆ . ಲಾವಾ ರಸದಿಂದ ಮುತ್ತುಗಳೇ ? ಪ್ರೇಮಲೋಕದಲ್ಲಿ ಎಲ್ಲಾ ಸಾಧ್ಯ ಗೆಳತಿ . ಪ್ರೀತಿಯ ಶಕ್ತಿ ಅಂತಹದ್ದು .ನೀ ಸಿಗುವ ತನಕ ಒಂದೊಂದು ಮುತ್ತು ಅಂದರೆ ಪ್ರೇಮ ಪತ್ರ ಬರೆಯುತ್ತಲೇ ಇರುತ್ತೇನೆ . ಸಿಕ್ಕಮೇಲೆ ಬರೆಯುದಿಲ್ಲವೇ ?ಅಂತ ಕೇಳಬಹುದು .ಮನ್ಮಥನೇ ನಿನ್ನ ಜೊತೆ ಇರಬೇಕಾದರೆ ಇನ್ನು ಅವನ ಬಿಲ್ಲು ಬಾಣ ಯಾಕೆ ? ಅಲ್ವಾ ?

4 ಕಾಮೆಂಟ್‌ಗಳು:

Ondalla Erdalla Kannada Movie Review

ಚಿತ್ರದುದ್ದಕ್ಕೂ ೬ ಅಡಿ ಹೀರೋಗಳ ಗುಣಗಾನ , ಒಂದಿಷ್ಟು ಬಿ ಸೆಂಟರ್ ಆಡಿಯನ್ಸ್ ಗಮನದಲ್ಲಿ ಇಟ್ಟುಕೊಂಡು ನಾಯಕಿ ಹೊಕ್ಕಳು ತೋರಿಸುವ ಧೃಶ್ಯಗಳು ಇರುವ, ಇಲ್ಲವೇ ಈಗಗಾಲೇ ಕಥೆ...